ಮಡಿಕೇರಿ.
ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ (Residential School ) ನಡೆದಿದ್ದ ಅಗ್ನಿ ದುರಂತ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಅನುಮತಿಯನ್ನೇ ಪಡೆಯದೆ ವಸತಿ ಶಾಲೆ ನಡೆಸುತ್ತಿರೋ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳ ವಸತಿಗೆ ಸಂಬಂಧಿಸಿ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಶಿಕ್ಷಣ ಇಲಾಖೆ ಅನುಮತಿಯನ್ನು ಶಾಲೆ ಪಡೆದಿರಲಿಲ್ಲ ಎಂಬ ವಿಷಯ ಗೊತ್ತಾಗಿದೆ. ದೆಹಲಿ ಮೂಲದ ಉದ್ಯಮಿ ಶಾಲೆ ನಡೆಸುತ್ತಿದ್ದರು ಎನ್ನಲಾಗಿದೆ.
ಪುರಾತನ ಮನೆಯಲ್ಲಿ ನಸಡೆಸಲಾಗುತ್ತಿದ್ದ ಈ ವಸತಿ ಶಾಲೆಯಲ್ಲಿ 102 ಮಕ್ಕಳಿಗೆ ಪ್ರವೇಶ ನೀಡಲಾಗಿತ್ತು. ಆ ಪೈಕಿ 70 ಮಕ್ಕಳು ಶಾಲೆಯಲ್ಲೇ ವಾಸ್ತವ್ಯ ಮಾಡುತ್ತಿದ್ದರು. ಕೇವಲ ನಾಲ್ಕು ಕೋಣೆ ಇರೋ ಮನೆಯಲ್ಲಿ ಮಕ್ಕಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಸಾಮರ್ಥ್ಯಕ್ಕೂ ಅಧಿಕ ವಿದ್ಯಾರ್ಥಿಗಳನ್ನ ದಾಖಲಿಸಿಕೊಳ್ಳಲಾಗಿತ್ತು. ಉಚಿತ ಶಿಕ್ಷಣದ ಹೆಸರಲ್ಲಿ ವಸತಿ ಶಾಲೆ ನಡೆಸಲಾಗುತ್ತಿದ್ದರೂ ಇಲ್ಲಿ ಮಕ್ಕಳಿಗೆ ವಸತಿ ನೀಡಲಾಗುತ್ತಿಲ್ಲ ಎಂದು ಶಾಲೆಯವರು ಶಿಕ್ಷಣ ಇಲಾಖೆಗೆ ದೃಢೀಕರಣ ನೀಡಿದ್ದರು ಎನ್ನಲಾಗಿದೆ.
ನಿನ್ನೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಶಾಲಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಬಾಲಕರ ಸಮಯ ಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿತ್ತು. ಹೊಗೆಯಿಂದ ಎಚ್ಚೆತ್ತಿದ್ದ ಬಾಲಕರಾದ ಬಬಿನ್ ಮತ್ತು ಯಶ್ವಿನ್, ತಕ್ಷಣವೇ ಕಿರುಚಾಡಿ ಎಲ್ಲಾ ಮಕ್ಕಳನ್ನ ಎಬ್ಬಿಸಿ ಬಾಗಿಲಿನತ್ತ ಓಡಿಸಿದ್ದರು. ಆದರೆ ಬಾಗಿಲು ತೆರೆದುಕೊಂಡಿಲ್ಲ. ಕಿಟಕಿಯ ಗಾಜನ್ನ ಒಡೆಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಹಾಗಾಗಿ ತಕ್ಷಣವೇ ಮತ್ತೊಂದು ಕೋಣೆಗೆ ಓಡಿ ಅಲ್ಲಿ ಕಿಟಗಿ ಬಾಗಿಲು ತೆರೆದು ಉಳಿದ ಮಕ್ಕಳನ್ನ ಹೊರಕ್ಕೆ ದಾಟಿಸಿದ್ದರು. ಆದರೆ ದುರದೃಷ್ಟವಶಾತ್ ಬಾಲಕ ಪುಷ್ಪಕ್ ಮಾತ್ರ ಹೊರ ಬರಲಾರದೆ ಈ ವೇಳೆ ಸಾವನ್ನಪ್ಪಿದ್ದ.