ಬಿಗ್ ಬಾಸ್ ವಿನ್ನರ್ ಯಾರು!
ಕೊನೆಯಲ್ಲಿ ಗಿಲ್ಲಿ ಎಡವಿದ್ನ?
ಅಶ್ವಿನಿ ಆಟ ಮತ್ತು ತಾಯಿ ಹೃದಯ ಜನರ ಮನ ಬದಲಿಸಿತಾ!
ಬೆಂಗಳೂರು.
ಗಿಲ್ಲಿ ನಟ ಕೊನೆಕೊನೆಯಲ್ಲಿ ಯಾಕೆ ಹೀಗೆ ಆಗೋದ್ರು ಅನ್ನೋದು ಬಹಳ ಜನರಿಗೆ ಅರ್ಥವಾಗ್ತಾ ಇಲ್ಲ. ಅವರು ಹನುಮಂತ ಮತ್ತು ಪ್ರಥಮ್ ಗೆದ್ದ ಸೀಸನ್ ಗಳಿಂದ ಪ್ರೇರಣೆ ತಗೊಂಡಿದ್ದನ್ನು ಸುದೀಪ್ ಅವರಿಗೆ ಹೇಳಿಕೊಂಡರು. ಎಲ್ಲ ಸೀಸನ್ ನೋಡಿರುವುದಾಗಿಯೂ ಹೇಳಿಕೊಂಡರು. ಮೊದಲ ಸೀಸನ್ ಅವರು ನೋಡಿರಲಿಕ್ಕಿಲ್ಲ. ಇನ್ನೇನು ಗೆದ್ದೇ ಬಿಟ್ಟರು ಅನ್ನೋ ಹಂತ ತಲುಪಿದ್ದ ಪಕ್ಕಾ ಪ್ಯಾಕೇಜ್ ಅರುಣ್ ಸಾಗರ್ ಯಾಕೆ ರನ್ನರ್ ಅಪ್ ಆಗಿ ಉಳಿದರು ಅನ್ನೋದು ಅವರಿಗೆ ಗೊತ್ತಿಲ್ಲ. ಒಂದು ಸಣ್ಣ ಲವ್ ಟ್ರಾಕ್ ಅವರ ಗೆಲುವಿಗೆ ಅಡ್ಡಿಯಾಗಿತ್ತು. ಅದು ಅವರಿಗೆ ಬೇಡವಾಗಿತ್ತು. ಯಾಕೆಂದರೆ ಜನರಿಗೆ ಅದು ಇಷ್ಟ ಆಗಿರಲಿಲ್ಲ.
ಕಾವ್ಯ ಜೊತೆಗಿನ ಸ್ನೇಹವೋ, ಪ್ರೀತಿಯೋ ಗಿಲ್ಲಿ ಗೆ ಅದನ್ನು ನಿಭಾಯಿಸಲು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಬೇಕಾದಷ್ಟು ಸಮಯ ಇತ್ತು. ಈಗಲೂ ಇದೆ. ಹೀಗೆ ಹುಡುಗ ಹುಡುಗಿಯ ಅಥವಾ ಹುಡುಗಿ ಹುಡುಗನ ಬೆನ್ನು ಬೀಳೋದು, ಅಂಗಲಾಚೋದು, ತನ್ನ ವ್ಯಕ್ತಿತ್ವವನ್ನು, ಆಟವನ್ನು ಹಾಳುಮಾಡಿಕೊಳ್ಳೋದು ಜನರಿಗೆ ಇಷ್ಟವಾಗೋಲ್ಲ, ಕಟ್ಟರ್ ಅಭಿಮಾನಿಗಳಿಗೂ ಕೂಡ ಅದು ಪಥ್ಯ ಆಗಲ್ಲ ಅನ್ನೋದು ಅವರಿಗೆ ಅರ್ಥವಾಗಿಲ್ಲ .
ಗಿಲ್ಲಿ ನಟನ ಸ್ಟ್ರೆಂಥ್ ಮತ್ತು ವೀಕ್ ನೆಸ್ ಎರಡೂ ಕೂಡ ಆತನ ಕಾಮಿಡಿಯೇ. ಬಿಗ್ ಬಾಸ್ ನ ಹಲವಾರು ಸೀಸನ್ ಗಳಲ್ಲಿ ಹಲವಾರು ಹಾಸ್ಯ ಕಲಾವಿದರು ಬಂದು ಹೋಗಿದ್ದಾರೆ. ಹಾಸ್ಯ ಮತ್ತು ಅಪಹಾಸ್ಯದ ನಡುವಿನ ಗೆರೆ ಅರಿತು ಆಡಿದವರು ಅವರು. ಕುರಿ ಪ್ರತಾಪ್ ನನ್ನ ಬೆಸ್ಟ್ ಆಯ್ಕೆ. ಅದು ನಿಜವಾದ ಹಾಸ್ಯ. ಸೃಜನ್, ಮಂಜು ಪಾವಗಡ, ಪ್ರಿಯಾಂಕಾ, ಶುಭ ಪೂಂಜಾ, ಅರುಣ್ ಸಾಗರ್, ನಿರಂಜನ್, ತುಕಾಲಿ ಸಂತು ಸೇರಿದಂತೆ ಹಲವರು ಬೇರೆ ಬೇರೆ ಸೀಸನ್ ಗಳಲ್ಲಿ ಇನ್ನೊಬ್ಬರನ್ನು ಲೇವಡಿ ಮಾಡದೆಯೂ ನಗೆ ಉಕ್ಕಿಸಬಹುದು ಅನ್ನೋದನ್ನು ತೋರಿಸಿದ್ದಾರೆ. ಗಿಲ್ಲಿ ಅಂಥವರಿಂದ ಪ್ರೇರಣೆ ಪಡೆದಂತೆ ತೋರುತ್ತಿಲ್ಲ.
ಈ ಸೀಸನ್ ನ ಸರ್ಪ್ರೈಸ್ ಪ್ಯಾಕೇಜ್ ರಕ್ಷಿತಾ ಶೆಟ್ಟಿ. ಆಕೆಯ ಎನರ್ಜಿ ಯನ್ನು ಮ್ಯಾಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆಕೆಗೆ ಅಷ್ಟು ಹತ್ತಿರವಿದ್ದು ಗಿಲ್ಲಿ ಅದನ್ನು ಕಲಿಯಲಿಲ್ಲ. ಇತ್ತೀಚಿಗೆಯಂತೂ ಯಾವುದೋ ಒಂದು ಮೂಲೆಯಲ್ಲಿ ಬೆಡ್ ಶೀಟ್ ಮುಚ್ಚಿ ಗುಬ್ಬರಾಕೊಂಡ ಗಿಲ್ಲಿಯೇ ಎಲ್ಲ ಫೂಟೇಜ್ ನಲ್ಲೂ ಕಾಣುತ್ತಾರೆ. ಗಿಲ್ಲಿಗೆ ಸ್ಪೈನಲ್ ಕಾರ್ಡ್ ಇಲ್ಲ ಎಂಬ ಟೀಕೆಗೆ ಆತ ನೂರಕ್ಕೆ ನೂರು ಅರ್ಹ.
ರಕ್ಷಿತಾ ಅಶ್ವಿನಿ ಗೌಡ ಜೊತೆ ಹರಟುತ್ತಾ ಕುಳಿತಿದ್ದಾಗ ಗಿಲ್ಲಿ ರೇಗಿಸುತ್ತಾನೆ. ರಕ್ಷಿತಾ ಸೊಪ್ಪು ಹಾಕೋದಿಲ್ಲ. ನಿಮ್ಮ ಬೆಸ್ಟ್ ಫ್ರೆಂಡ್ (ಅಶ್ವಿನಿ ) ಜೊತೆ ಮಾತಾಡಿ ಬನ್ನಿ ಎಂದು ಸವಾಲು ಹಾಕುತ್ತಾರೆ. ಮೀಟರ್ ಬೇಕು ಮೀಟರ್ ಎಂದು ಗಿಲ್ಲಿಗೆ ರೇಗಿಸುತ್ತಾರೆ. ರಕ್ಷಿತಾ ಹಾಗೇನೇ, ಕಂಫರ್ಟ್ ಜೋನ್ ಆಚೆ ಬಂದು ಎದುರಾಳಿಗಳ ಜೊತೆ ಕುಳಿತು ಮಾತಾಡುವಷ್ಟು ಧೈರ್ಯ ಅವರಿಗಿದೆ. ಮುಗ್ಧಳ ಹಾಗೆ ಕಂಡರು ಆಕೆ ಒಮ್ಮೊಮ್ಮೆ ಪ್ರಬುದ್ಧತೆ ತೋರುತ್ತಾರೆ.
ಇನ್ನು ಪ್ರಥಮ್ ಗೆದ್ದ ಸೀಸನ್ ನೋಡಿದವರಿಗೆ ಒಂದು ಅರ್ಥವಾಗುತ್ತದೆ. ಯಾವುದಾದರೂ ಒಬ್ಬ ಕಂಟೆಸ್ಟೆಂಟ್ ಮೇಲೆ ಇಡೀ ಮನೆಯವರು ತಿರುಗಿ ಬಿದ್ದರೆ ಅವರು ಸಾರ್ವಜನಿಕ ಅನುಕಂಪಕ್ಕೆ ಅರ್ಹರಾಗುತ್ತಾರೆ ಅನ್ನೋದು ಕೂಡ ಗಿಲ್ಲಿ ಅರ್ಥ ಮಾಡಿಕೊಂಡಂತಿಲ್ಲ. ಅಶ್ವಿನಿ ಗೌಡ ಮತ್ತು ಧ್ರುವಂತ್ ಹೇಗೆ ಕಪ್ ಗೆಲ್ಲುವ ಕಂಟೆಂಡರ್ ಗಳಾಗಿ ಹೊರಹೊಮ್ಮಿದ್ದಾರೆ ಅನ್ನೋದು ಗಿಲ್ಲಿ ಮಾತ್ರವಲ್ಲ, ಮನೆಯ ಉಳಿದವರಿಗೂ ಅರ್ಥವಾದಂತಿಲ್ಲ. ಯಾರನ್ನೋ ನೀವೆಲ್ಲ ಸೇರಿ ಐಸೋಲೇಟ್ ಮಾಡಿ ಹಣಿತಾನೇ ಇದ್ರೆ ನೋಡೋರು ಅವರ ಪರ ನಿಂತುಕೊಳ್ತಾರೆ. ನೀವು ನಿಮ್ಮದೇ gang ಕಟ್ಟಿಕೊಂಡ್ರಿ. ಅದೇ ನಿಮಗೆ ಮುಳುವಾಯಿತು.
ಅಶ್ವಿನಿ ಗೌಡ ಆರಂಭದ ದಿನಗಳಲ್ಲಿ ಮಾಡಿಕೊಂಡ ಯಡವಟ್ಟು ಗಳು ಎಲ್ಲರಿಗೂ ಗೊತ್ತಿದೆ. ಸೋಷಿಯಲ್ ಮೀಡಿಯಾ ತುಂಬೆಲ್ಲ ಅವರ ಕುರಿತು ನೆಗೆಟಿವಿಟಿಯೇ ತುಂಬಿಕೊಂಡಿತ್ತು. ಅವರು ಹೀಗಲ್ಲ, ಅವರ ವ್ಯಕ್ತಿತ್ವ ಬೇರೇನೇ ಇದೆ ಅಂತ ನಾನು ಬರೆದಾಗ ನನ್ನ ಸ್ನೇಹಿತರೇ ನನ್ನನ್ನು ಟೀಕಿಸಿದರು. ಅದು ಸಹಜವೂ ಆಗಿತ್ತು. ಆದರೆ ಈಗ ಅಶ್ವಿನಿ ಗೌಡ ಬಿಗ್ ಬಾಸ್ ಗೆಲ್ಲುವ ಸಾಧ್ಯತೆ ದಟ್ಟವಾಗಿ ಕಾಣ್ತಾ ಇದೆ. ಈ ಸೀಸನ್ ಎಂಗೇಜಿಂಗ್ ಆಗಿ ಇಡುತ್ತ ಬಂದಿದ್ದು ಅಶ್ವಿನಿ, ಗಿಲ್ಲಿ ಮತ್ತು ರಕ್ಷಿತಾ. ಬಿಗ್ ಬಾಸ್ ನ ಶೇ 90 ಪ್ರೋಮೋ ಗಳನ್ನು ಡಾಮಿನೇಟ್ ಮಾಡಿದವರು ಇದೆ ಮೂವರು. ಬಹುಶಃ ಅವರೇ ಟಾಪ್ ಥ್ರೀ ನಲ್ಲಿ ಇರ್ತಾರೆ. ಧ್ರುವಂತ್ ಕೂಡ ಈ ಮೂವರ ನಡುವೆ ತೂರಿ ಬರಬಹುದು.
ಅಶ್ವಿನಿ ಗೌಡ ಇಲ್ಲಿಯವರೆಗೆ ಉಳಿದು ಬಂದಿದ್ದೆ ಒಂದು ದೊಡ್ಡ ಆಶ್ಚರ್ಯ. ಫೇಕ್ ಆಗಿ ಇರೋದು ಅವರಿಗೆ ಕಷ್ಟ. ತನಗೆ ಅನಿಸಿದ್ದನ್ನು ಹೇಳದೆ ಬಿಡುವವರು ಅವರಲ್ಲ. ಅವರನ್ನು ಕೆಣಕುವುದು ಸುಲಭ, ಕೆರಳಿಸುವುದು ಸುಲಭ. ಉಳಿದ ಕಂಟೆಸ್ಟೆಂಟ್ ಗಳಿಗೂ ಇದು ಅರ್ಥವಾಗಿತ್ತು. ಅವರು ಕೆರಳಿಸಿದರು, ಇವರು ಕೆರಳಿದರು. ಈ ಪ್ರೋಸೆಸ್ ನಲ್ಲಿ ಅವರು ಗಟ್ಟಿಯಾಗ್ತಾನೆ ಹೋದರು, ಛಲದಿಂದ ಆಡಿದರು, ಗೆಲುವಿನ ಹೊಸ್ತಿಲಿಗೆ ಬಂದು ನಿಂತರು.
ಆರಂಭದಲ್ಲಿ ರಕ್ಷಿತಾ ಬಗ್ಗೆ ಆಡಿದ ಮಾತುಗಳ ಕುರಿತು ಅವರು ಈಗಲೂ ರಿಗ್ರೆಟ್ ಇಟ್ಟುಕೊಂಡಿದ್ದಾರೆ. ಹಲವು ಬಾರಿ ಅವರು ಸಾರಿ ಕೇಳಿದ್ದಿದೆ . ಇತ್ತೀಚಿಗೆ ರಕ್ಷಿತಾ ಎಲಿಮಿನೇಟ್ ಆದಾಗ ( ಸೀಕ್ರೇಟ್ ರೂಮ್ ಗೆ ಹೋದಾಗ) ಸಾರಿ ಕೇಳಿದ್ದನ್ನು ನೀವು ಗಮನಿಸಿರುತ್ತೀರಿ. ಅದರಲ್ಲಿ ಕಪಟವಿರಲು ಸಾಧ್ಯವಿಲ್ಲ. ರಕ್ಷಿತಾ ತನ್ನ ವಿರೋಧಿ ಪಾಳಯದಲ್ಲಿ ಇದ್ದರೂ ಆಕೆಯ ವಿಷಯದಲ್ಲಿ ಅಶ್ವಿನಿ ಸಾಫ್ಟ್ ಆಗೆ ಇರುತ್ತಾರೆ. ಅದಕ್ಕೆ ಅವರಿಗೆ ಇರುವ ರಿಗ್ರೆಟ್ ಕಾರಣವಾಗಿರಬಹುದು.
ಅಶ್ವಿನಿ ಗೌಡರ ದೊಡ್ಡ ಶಕ್ತಿ ಏನೆಂದರೆ ಅವರ ತಾಯ್ತನ. ಆಗಾಗ ಅವರೊಳಗಿನ ತಾಯಿ ಎದ್ದು ನಿಲ್ತಾರೆ. ಗಿಲ್ಲಿ ನಟನೊಂದಿಗಿನ ಸಂಭಾಷಣೆ ಒಂದರಲ್ಲಿ ಅವರು ಅವನ ಸೋಂಬೇರಿತನಗಳ ಬಗ್ಗೆ ಹೇಳ್ತಾ ಹೋಗ್ತಾರೆ. ಒಂದಕ್ಕೆ ಹೋದ್ರೆ ನೀರು ಹಾಕಲ್ಲ, ಸ್ನಾನ ಮಾಡಲ್ಲ ಅಂತೆಲ್ಲ ಹೇಳುವಾಗ ಅವನು ನೀನೇ ಉಜ್ಜು ಅಂತೇನೋ ಹೇಳಿಬಿಡುತ್ತಾನೆ. ಆಗ ಥಟ್ ಅಂತ ಅಶ್ವಿನಿ ಹೇಳಿದ ಮಾತು, ನನ್ನ ಮಗ ಅಂದ್ಕೊಂಡು ಮಾಡ್ತೀನಿ ಬಿಡು ಅಂತ. ಅಂಥ ಕೌಂಟರ್ specialist ಗಿಲ್ಲಿ ಬಳಿಯೂ ಯಾವುದೇ ಉತ್ತರ ಇರಲಿಲ್ಲ. ಒಮ್ಮೆ ಅಶ್ವಿನಿ ಗೌಡ ಟಾಸ್ಕ್ ಆಡುವ ಸಂದರ್ಭದಲ್ಲಿ ಗಿಲ್ಲಿ ನಟ ರಕ್ಷಿತಾ ಮೇಲೆ ಕೈಮಾಡಿ ಆಕೆ ಕೆಳಗೆ ಬಿದ್ದುಬಿಡುತ್ತಾಳೆ. ಟಾಸ್ಕ್ ನಡುವೆಯೂ ಅದನ್ನು ಗಮನಿಸುವ ಅಶ್ವಿನಿ ರೇಗುತ್ತಾರೆ. ಈ ಥರದ ಸಣ್ಣ ಸಣ್ಣ ಗೆಸ್ಚರ್ ಗಳು ಅವರನ್ನು ಬೆಳೆಸುತ್ತಾ ಬಂದಿವೆ. ಅದಕ್ಕೆ ಕಾರಣ ಆಕೆಯ ಒಳಗಿನ ತಾಯಿ. ಮನೆಯಿಂದ ಹೊರಬಂದ ಮೇಲೆ ಸೂರಜ್ ಮತ್ತು ಅಭಿಷೇಕ್ ಕೂಡ ಆಕೆಯ ತಾಯ್ತನದ ಬಗ್ಗೆ ಮಾತಾಡಿದ್ದನ್ನು ನೀವು ಗಮನಿಸಿರಬಹುದು.
ಗಿಲ್ಲಿ, ಅಶ್ವಿನಿ, ರಕ್ಷಿತಾ, ಧ್ರುವಂತ್ ಟಾಪ್ ಫೋರ್ ನಲ್ಲಿ ಇರುವ ಸಾಧ್ಯತೆ ಹೆಚ್ಚು. ಯಾರು ಬೇಕಾದರೂ ಗೆಲ್ಲಬಹುದು. ಆದರೆ ಗಿಲ್ಲಿಯೇ ಗೆಲ್ಲುತ್ತಾನೆ ಅನ್ನೋ ಅಭಿಪ್ರಾಯ ಈಗಿಲ್ಲ. ಹೀಗಾಗಲು colors, ಬಿಗ್ಬಾಸ್, ಸುದೀಪ್ ಯಾರೂ ಕಾರಣ ಅಲ್ಲ. ಅದಕ್ಕೆ ಗಿಲ್ಲಿಯೇ ಕಾರಣ. ಸುಲಭವಾಗಿ ಒಲಿಯಬಹುದಾಗಿದ್ದ ಸ್ಥಾನವನ್ನು ಆತ ಕಷ್ಟ ಪಟ್ಟು ಗೆಲ್ಲಬೇಕಾದ ಹಂತ ತಲುಪಿ ಆಗಿದೆ. ತಾನು ಗೆಲ್ಲುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿದ್ದ ಗಿಲ್ಲಿ, ತಾನು ಗೆದ್ದು ತನ್ನೊಂದಿಗೆ ರನ್ನರ್ ಅಪ್ ಯಾರು ಆಗಬೇಕು ಅನ್ನೋದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೆ ಇದಕ್ಕೆ ಕಾರಣ. ಯಾವುದೇ ರಿಯಾಲಿಟಿ ಶೋ ನನಗೆ ಇಷ್ಟ ಬಂದ ಹಾಗೆ manipulate ಮಾಡಬಲ್ಲೆ, ನನಗೆ ಬೇಕಾದಂತೆ ಒಗ್ಗಿಸಿಕೊಳ್ಳಬಲ್ಲೇ, ಗೆಲ್ಲಬಲ್ಲೆ ಅನ್ನೋ ಅಹಂಕಾರ, ಉಡಾಫೆ ಏನಾದರೂ ಅವರಿಗೆ ಇತ್ತಾ? ಅವರೇ ಹೇಳಬೇಕು.
ಇನ್ನುಳಿದಂತೆ ಬಾಕಿ ಉಳಿದ ಯಾರಿಗೂ ಗೆಲ್ಲುವ ಸ್ಪಾರ್ಕ್ ಇದ್ದಂತಿಲ್ಲ. ಕಾವ್ಯ confused ಆಗಿದ್ದಾರೆ. ಆಕೆ ಗೆಳೆಯ ಧನುಷ್ ಮಾತು ಕೇಳಬೇಕೋ, ಮನೆಯವರು ಬಂದಾಗ ಹೇಳಿಕೊಟ್ಟಿದ್ದನ್ನು ಕೇಳಬೇಕೋ, ಪ್ರೀತ್ಸೇ ಪ್ರೀತ್ಸೇ ಎಂದು ಅಂಗಲಾಚುವ ಗಿಲ್ಲಿನಟನ ಮಾತು ಕೇಳಬೇಕೋ ಅನ್ನೋ ಗೊಂದಲದಲ್ಲೇ ಇರುವಂತಿದೆ. ಟಾಸ್ಕ್ ಆಡಿಯೇ ಉಳಿದುಕೊಂಡಿರುವ ಧನುಷ್ ಅದಕ್ಕೆ ಹೊರತಾಗಿ ಏನೂ ಮಾಡಿದಂತೆ ತೋರುತ್ತಿಲ್ಲ. ಹೀಗಾಗಿ ಫಿನಾಲೆಗೆ ಬಂದ್ರೂ ಅವರು ಗೆಲ್ಲೋದಿಲ್ಲ. ಮಿಕ್ಕಂತೆ ವೈಲ್ಡ್ ಕಾರ್ಡ್ ಕಾಂಟೆಸ್ಟೆಂಟ್ ರಘು ಬಿಲ್ಡ್ ಅಪ್ ಕೊಡೋದ್ರಲ್ಲಿ ನಿಸ್ಸೀಮ. ಗೆಲ್ಲುವ ಫೈರ್ ಖಂಡಿತಾ ಇಲ್ಲ. ಕೊನೆಯದಾಗಿ ರಾಶಿಕ ಬಗ್ಗೆ ಹೇಳೋದಕ್ಕೆ ಏನೂ ಇಲ್ಲ. ಸೂರಜ್ ಗಿಂತ ಮೊದಲು ಅವರು ಹೊರಗೆ ಬರಬೇಕಿತ್ತು. ಇಲ್ಲಿಯವರೆಗೆ ಬಂದಿರುವುದೇ ಆಕೆಯ ಅದೃಷ್ಟ. ರಾಶಿಕಾಗಿಂತ ಜಾಹ್ನವಿ ನೂರಕ್ಕೆ ನೂರು ಪಾಲು ಹೆಚ್ಚು ಒಳ್ಳೆಯ ಕಾಂಟೆಸ್ಟೆಂಟ್.
ಅಶ್ವಿನಿ ಅವರಿಗೆ ಬಿಗ್ ಬಾಸ್ ಶೋ ಆಗಿಬರಲ್ಲ. ಅವರು ಅಲ್ಲಿಗೆ ಹೋಗಲೇಬಾರದಿತ್ತು ಎಂದು ಹಿಂದೆ ಬರೆದಿದ್ದೆ. ನೂರು ದಿನಗಳ ಕಾಲ ಅಲ್ಲಿ ಅವರು ಆಡಿದ ರೀತಿಯನ್ನು ನೋಡಿದ ಮೇಲೆ ಈ ಸೀಸನ್ ಅಶ್ವಿನಿ ಗೌಡ ಅವರೇ ಗೆಲ್ಲಲಿ ಎಂಬ ಆಸೆ ನನಗೆ. ನಿಮಗೆ?