ಸೀತಾಪುರ (ಉತ್ತರ ಪ್ರದೇಶ): ಜಿಲ್ಲೆಯ ಜನರು ಆಡಳಿತದಲ್ಲಿ ಎದುರಿಸುತ್ತಿರುವ ಕುಂದುಕೊರತೆಗಳನ್ನು ಆಲಿಸಿ, ಅವರಿಗೆ ಪರಿಹಾರ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ರೀತಿಯ ಸಮಸ್ಯೆ ಹೇಳಿಕೊಂಡಿದ್ದು, ಇದನ್ನು ಕೇಳಿರುವ ಜಿಲ್ಲಾಧಿಕಾರಿ ಮತ್ತು ಜನರು ಅವಕ್ಕಾಗಿದ್ದಾರೆ.
ಸೀತಾಪುರ ಜಿಲ್ಲೆಯಲ್ಲಿ ಈ ರೀತಿಯ ವಿಚಿತ್ರ ದೂರೊಂದನ್ನು ಜಿಲ್ಲಾ ಮ್ಯಾಜಿಸ್ಟೇಟ್ ಆಲಿಸಿದ್ದಾರೆ. ಅಧಿಕಾರಿಗಳ ಸಾರ್ವಜನಿಕ ಕುಂದುಕೊರತೆ ಸಭೆಗೆ ಆಗಮಿಸಿದ್ದ ವ್ಯಕ್ತಿ, ರಾತ್ರಿ ನನ್ನ ಹೆಂಡತಿ ನಾಗಿಣಿಯಾಗಿ ಬದಲಾಗುತ್ತಾಳೆ. ಇಡೀ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ರಾತ್ರಿಯೆಲ್ಲಾ ಭಯದಲ್ಲೇ ಕಳೆಯುವಂತೆ ಆಗಿದೆ. ಇದಕ್ಕೆ ಪರಿಹಾರ ನೀಡಿ ಎಂದು ಮೊರೆ ಇಟ್ಟಿದ್ದಾನೆ.
ಈ ರೀತಿ ವಿಚಿತ್ರ ದೂರನ್ನು ಇಟ್ಟ ವ್ಯಕ್ತಿ ಮಹ್ಮದಾಬಾದ್ ತಹಸಿಲ್ನ ಲೋಧಾಸಾ ಗ್ರಾಮದ ದೂರುದಾರ ಮೆರಾಜ್. ಅಕ್ಟೋಬರ್ 4 ರಂದು ನಡೆದ ಸಮಾಧಾನ್ ದಿವಸ್ (ಸಾರ್ವಜನಿಕ ಕುಂದುಕೊರತೆ ಪರಿಹಾರ ದಿನ) ಸಂದರ್ಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಆನಂದ್ ಅವರ ಮುಂದೆ ತನ್ನ ಕಷ್ಟವನ್ನು ಬಿಚ್ಚಿಟ್ಟಿದ್ದು, ಈ ಸಮಸ್ಯೆ ಆಲಿಸಿದ ಅಧಿಕಾರಿಯೇ ದಂಗಾಗಿದ್ದಾರೆ.
ನನ್ನ ಹೆಂಡತಿ ನಸಿಮನ್ ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಆಕೆ ರಾತ್ರಿಯಾದರೆ ಸಾಕು ನಾಗಿಣಿಯಂತೆ ಆಡುತ್ತಾಳೆ. ಅಷ್ಟೇ ಅಲ್ಲದೆ, ಹಾವಿನಂತೆ ಹಿಸ್ ಹಿಸ್ ಎಂದು ಸದ್ದು ಮಾಡುತ್ತಾ ನನಗೆ ಭಯ ಪಡಿಸುತ್ತಾಳೆ. ಪ್ರತಿನಿತ್ಯ ಆಕೆಯ ಈ ವಿಚಿತ್ರ ಕಾಟಕ್ಕೆ ಬೇಸತ್ತಿದ್ದೇನೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಹೇಳುವ ಮುನ್ನ ಈ ಸಮಸ್ಯೆಯನ್ನು ಸ್ಥಳೀಯ ಪೊಲೀಸರ ಮುಂದೆ ಕೂಡ ಈ ದೂರು ಸಲ್ಲಿಸಲಾಗಿದ್ದು, ಅವರಿಂದ ಯಾವುದೇ ಪ್ರಯೋಜನ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಇದೀಗ ದಿಕ್ಕು ತೋಚದೆ ನಿಮ್ಮಿಂದ ಪರಿಹಾರ ಲಭ್ಯವಾಗಲಿದೆ ಎಂದು ಜಿಲ್ಲಾ ಆಡಳಿತದ ಸಹಾಯಕ್ಕೆ ಮೊರೆಯಿಟ್ಟಿರುವುದಾಗಿ ತಿಳಿಸಿದ್ದಾನೆ.
ಮೆರಾಜ್ ಸಮಸ್ಯೆ ವಿಲಕ್ಷಣವಾಗಿ ಕಂಡರೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಆತನನ್ನು ಸಮಾಧಾನ ಪಡಿಸಿದ್ದು, ಪೊಲೀಸರಿಗೆ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಕುಂದುಕೊರತೆ ಪರಿಹಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಇತರೆ ಅಧಿಕಾರಿಗಳು ಈತನ ಈ ದೂರು ಅಚ್ಚರಿ ಜೊತೆಗೆ ವಿಚಿತ್ರವಾಗಿ ಕಂಡಿದ್ದು, ಅವರು ಕೂಡ ಆತನ ಸಮಸ್ಯೆಯನ್ನು ಸಮಚಿತ್ತದಿಂದ ಆಲಿಸಿದರು.
ಜಿಲ್ಲಾಧಿಕಾರಿ ಅವರು ವ್ಯಕ್ತಿಯ ಸಮಸ್ಯೆಯನ್ನು ಆಲಿಸಿದ್ದಾರೆ. ಆತನ ಸಮಸ್ಯೆಯನ್ನು ಬಗೆಹರಿಸುವಂತೆ ಪೊಲೀಸರಿಗೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸರು, ಇದೀಗ ವ್ಯಕ್ತಿಯಿಂದ ದೂರನ್ನು ಸ್ವೀಕರಿಸಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.